ಅಗ್ನಿ-6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗೋಮೂತ್ರದಿಂದ ತೊಳೆಯಲಾಗುತ್ತಿದೆ ಎಂದು DRDO ಅಧ್ಯಕ್ಷರು ನಿಜವಾಗಿಯೂ ಹೇಳಿದರೇ? ಸತ್ಯ ಪರಿಶೀಲನೆ

ಅಗ್ನಿ-6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗೋಮೂತ್ರದಿಂದ ತೊಳೆಯಲಾಗುತ್ತಿದೆ ಎಂದು DRDO ಅಧ್ಯಕ್ಷರು ನಿಜವಾಗಿಯೂ ಹೇಳಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: DRDO ಅಧ್ಯಕ್ಷರಾದ ಸಮೀರ್ ವಿ ಕಾಮತ್ ಅವರು ಅಗ್ನಿ 6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಶುದ್ಧೀಕರಣಕ್ಕಾಗಿ ಗೋಮೂತ್ರದಲ್ಲಿ ತೊಳೆಯಲಾಗುತ್ತಿದೆ ಎಂದು ಹೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಆರೋಪಿಸಲಾಗಿದೆ.

ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಲಗತ್ತಿಸಲಾದ ವೀಡಿಯೊವು AI- ರಚಿತವಾದ ಆಡಿಯೊದೊಂದಿಗೆ ಡಿಜಿಟಲ್ ಮಾರ್ಪಾಡು ಮಾಡಲಾದ ಡೀಪ್‌ಫೇಕ್ ಆಗಿದೆ. ಡಾ. ಕಾಮತ್ ಅವರು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ, ಮತ್ತು ಮೂಲ ವೀಡಿಯೊದಲ್ಲಿ ಸಂಪೂರ್ಣವಾಗಿ ವಿಭಿನ್ನವಾದ ಮತ್ತು ಹೇಳಿಕೆಯಲ್ಲಿ ಬಳಸಲಾದ ಆಡಿಯೊಗೆ ಸಂಬಂಧವಿಲ್ಲದ ಆಡಿಯೊವನ್ನು ಸೇರಿಸಲಾಗಿದೆ.

ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು Five rating

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ

******************************************************

DRDO (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ರವರು ಗೋಮೂತ್ರದಲ್ಲಿ ತೊಳೆದ ಕ್ಷಿಪಣಿಗಳ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ‘Lovely92698976’ ಎಂಬ X ಬಳಕೆದಾರರು ಅಂತಹ ಒಂದು ಪೋಸ್ಟ್ ಅನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ (ಕನ್ನಡದ ಅನುವಾದ): “ಮೋದಿ ದೇವರು ಈ ಹಿಂದೆ ಅಗ್ನಿ-6 ಕ್ಷಿಪಣಿಯನ್ನು ಗೋಮೂತ್ರದಿಂದ ತೊಳೆಯಲು ಸೂಚಿಸಿದ್ದರು. ತುಕ್ಕು ಕಾಣಿಸಿಕೊಳ್ಳಲು ಆರಂಭವಾದಾಗ, ಬದಲಿಗೆ ಹಸುವಿನ ಸಗಣಿ ಬಳಸಲಾಯಿತು. ಭಾರತದಲ್ಲಿ ಗೋಮೂತ್ರದ ಗೀಳಿನ ವಿಜ್ಞಾನಿಗಳ ತುಕ್ಕು ಹಿಡಿದ ಮೆದುಳುಗಳು ದೇಶವನ್ನು ನಾಶಮಾಡುವ ಒಪ್ಪಂದವನ್ನು ಕೈಗೆತ್ತಿಕೊಂಡಿವೆ. ನಾಳೆ, ಜಗತ್ತು ಕೂಡ ಅಂತಹ ಸಗಣಿ ತುಂಬಿದ ಕ್ಷಿಪಣಿಗಳನ್ನು ಖರೀದಿಸುವುದಿಲ್ಲ.”

ಈ ಪೋಸ್ಟ್‌ನಲ್ಲಿ DRDO ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ರವರು ANI ಸಂದರ್ಶನದಲ್ಲಿ ಈ ಹೇಳಿಕೆಗಳನ್ನು ನೀಡುತ್ತಿರುವುದನ್ನು ತೋರಿಸಲಾಗಿದೆ ಎನ್ನುವ 44 ಕ್ಷಣಗಳ ವೀಡಿಯೊ ಸೇರಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ-

(ಪ್ರಸ್ತುತ ಭಾರತದಲ್ಲಿ ಈ ಖಾತೆಯನ್ನು ತಡೆಹಿಡಿಯಲಾಗಿದೆ)

ವೀಡಿಯೊದ ಸಂಪೂರ್ಣ ಅನುವಾದ: “ನಾವು ಅಗ್ನಿ-6 ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಎಲ್ಲಾ ಕ್ಷಿಪಣಿಗಳನ್ನು ತಯಾರಿಸುವ ಮುನ್ನ ಪವಿತ್ರ ಗೋಮೂತ್ರದಿಂದ ತೊಳೆಯಬೇಕು ಎಂದು ಪ್ರಧಾನಿ ಮೋದಿಯವರು ನಿರ್ದಿಷ್ಟವಾಗಿ ನಮಗೆ ತಿಳಿಸಿದರು. ಮೊದಲು, ನಾವು ಕ್ಷಿಪಣಿ ಭಾಗಗಳನ್ನು ಮೂತ್ರದಲ್ಲಿ ನೆನೆಸುತ್ತೇವೆ, ಆದರೆ ಅವುಗಳಿಗೆ ತುಕ್ಕು ಹಿಡಿಯಲಾರಂಭಿಸಿತು. ಆದ್ದರಿಂದ, ಈಗ ನಾವು ತುಕ್ಕನ್ನು ತಡೆಯಲು ಹಸುವಿನ ಸಗಣಿ ಮತ್ತು ಮೂತ್ರದ ಮಿಶ್ರಣವನ್ನು ಬಳಸುತ್ತಿದ್ದೇವೆ. ನಿಮಗೆ ತಿಳಿದಿರುವಂತೆ, ಹಸುವಿನ ಸಗಣಿ ಬ್ಯಾಕ್ಟೀರಿಯಾ ವಿರೋಧಿ ಕೂಡ ಆಗಿದೆ. ಆದ್ದರಿಂದ, ಈಗ ನಮ್ಮ ಕ್ಷಿಪಣಿ ಕಲುಷಿತವಾಗುವುದಿಲ್ಲ. ಇದು ಬಲಿಷ್ಠ ಭಾರತೀಯ ಕ್ಷಿಪಣಿ ಪ್ರೋಗ್ರಾಂ ಹಿಂದಿನ ರಹಸ್ಯ ಅಂಶವಾಗಿದೆ.”

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸಂಪೂರ್ಣವಾಗಿ ಸುಳ್ಳು ಎಂದು ಕಂಡುಕೊಂಡಿತು. ಹೇಳಿಕೆಯಲ್ಲಿನ ಈ ವೀಡಿಯೊವನ್ನು ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ಮಾರ್ಪಡಿಸಲಾಗಿದ್ದು, ಇದರಲ್ಲಿ AI- ರಚಿತವಾದ ಆಡಿಯೊವನ್ನು ಸೇರಿಸಲಾಗಿದೆ. ಡಾ. ಕಾಮತ್ ಎಂದಿಗೂ ಈ ಹೇಳಿಕೆಗಳನ್ನು ನೀಡಿಲ್ಲ, ಮತ್ತು ಮೂಲ ದೃಶ್ಯಾವಳಿಯಲ್ಲಿ ಸಂಪೂರ್ಣವಾಗಿ ವಿಭಿನ್ನವಾದ ಆಡಿಯೊ ಇದ್ದು, ಇದಕ್ಕೂ, ಹೇಳಿಕೆಗೂ ಯಾವುದೇ ಸಂಬಂಧವಿಲ್ಲ.

ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಅಗ್ನಿ 6 ಕ್ಷಿಪಣಿಯ ಕುರಿತು DRDO ಅಧ್ಯಕ್ಷರ ಹೇಳಿಕೆ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಫಲಿತಾಂಶಗಳಲ್ಲಿ ನಮಗೆ ಏಪ್ರಿಲ್ 30, 2026 ರಂದು ANI ಅಪ್‌ಲೋಡ್ ಮಡಿದ X ಪೋಸ್ಟ್‌ ದೊರಕಿತು. ಅದರ ಶೀರ್ಷಿಕೆ: “#ನೋಡಿ | ANI ರಾಷ್ಟ್ರೀಯ ಭದ್ರತಾ ಶೃಂಗಸಭೆ 2.0 | ಅಗ್ನಿ-VI ಬ್ಯಾಲಿಸ್ಟಿಕ್ ಕ್ಷಿಪಣಿಯ ಕುರಿತು, DRDO ಅಧ್ಯಕ್ಷ ಡಾ. ಸಮೀರ್ ವಿ ಕಾಮತ್ ಹೇಳಿದ್ದು, “ಇದು ಸರ್ಕಾರದ ನಿರ್ಧಾರ. ಸರ್ಕಾರ ನಮಗೆ ಅನುಮತಿ ನೀಡಿದ ಕೂಡಲೆ ನಾವು ಸಿದ್ಧರಿದ್ದೇವೆ.” ANI ಅಪ್‌ಲೋಡ್ ಮಾಡಿದ ಪೋಸ್ಟ್ ಅನ್ನು ಕೆಳಗೆ ನೋಡಿ-

ಇದರ ನಂತರ, ಪೂರ್ಣ ವೀಡಿಯೊ ದೃಶ್ಯಾವಳಿಯನ್ನು ಪಡೆಯಲು ನಾವು YouTube ನಲ್ಲಿ “DRDO ಅಧ್ಯಕ್ಷ ANI ಸಂದರ್ಶನ” ಎಂಬ ಪದಗಳೊಂದಿಗೆ ಹುಡುಕಾಟವನ್ನು ನಡೆಸಿದೆವು. ಏಪ್ರಿಲ್ 30, 2026ರಂದು ANI ಅಪ್‌ಲೋಡ್ ಮಾಡಿದ ಪೂರ್ಣ ಅವಧಿಯ ದೃಶ್ಯಾವಳಿ ನಮಗೆ ಸಿಕ್ಕಿತು, ಅದರ ಶೀರ್ಷಿಕೆ: “65 ನಿಮಿಷಗಳಲ್ಲಿ ರಕ್ಷಣಾ ತಜ್ಞರು AMCA ಪುಶ್, ಕ್ಷಿಪಣಿ ತಂತ್ರ, 6 ನೇ ತಲೆಮಾರಿನ ಯುದ್ಧ ವಿಮಾನ ಮತ್ತು ಹೆಚ್ಚಿನ ವಿಷಯಗಳ ಬಗ್ಗೆ ಮಾತನಾಡುತ್ತಾರೆ”. ಇದರ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ-

58:40 ಸಮಯಕ್ಕೆ ವರದಿಗಾರರೊಬ್ಬರು ಸಮಿತಿಗೆ ಒಂದು ಪ್ರಶ್ನೆಯನ್ನು ಕೇಳುತ್ತಾರೆ: “ನೀವು ಮೂವರನ್ನೂ ಪ್ರೇಕ್ಷಕರು ಕೇಳಲು ಬಯಸುತ್ತಾರೆ, ಅಗ್ನಿ-6ರ ಬಗ್ಗೆ ನಮಗೆ ತಿಳಿದಿರುವಂತೆ ಭಾರತಕ್ಕೆ ದೀರ್ಘ-ಶ್ರೇಣಿಯ ಕಾರ್ಯತಂತ್ರದ ಕ್ಷಿಪಣಿಯ ಅಗತ್ಯವಿದೆಯೇ? ಹೌದು ಎಂದಾದರೆ, ಅದು ಯಾವಾಗ ಬರಲಿದೆ?” ಇದಕ್ಕೆ ಪ್ರತಿಕ್ರಿಯೆಯಾಗಿ ಡಾ. ಕಾಮತ್ ರವರ ಉತ್ತರ: “ಇದು ಸರ್ಕಾರದ ನಿರ್ಧಾರ. ಸರ್ಕಾರ ನಮಗೆ ಯಾವಾಗ ಅನುಮತಿ ನೀಡುತ್ತದೆಯೋ ಆಗ ನಾವು ಸಿದ್ಧರಿದ್ದೇವೆ.” (ಈ ನಿರ್ದಿಷ್ಟ ಕ್ಲಿಪ್ ಅನ್ನು  AI-ರಚಿತ ಆಡಿಯೊದೊಂದಿಗೆ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ಬದಲಾಯಿಸಲಾಗಿದೆ ಮತ್ತು ಹೇಳಿಕೆಯಲ್ಲಿ ಬಳಸಲಾಗಿದೆ).

ಗೋಮೂತ್ರ, ಹಸುವಿನ ಸಗಣಿ, ತುಕ್ಕು ತಡೆಗಟ್ಟುವಿಕೆ, “ಶುದ್ಧೀಕರಣ” ಅಥವಾ ಪ್ರಾಣಿ ಉತ್ಪನ್ನಗಳ ಕುರಿತು ಪ್ರಧಾನಿ ಮೋದಿಯವರ ಯಾವುದೇ ಸೂಚನೆಗಳ ಬಗ್ಗೆ ಈ ವೀಡಿಯೊದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂಬುದನ್ನು ನೀವೇ ನೋಡಬಹುದು.

ಪತ್ರಿಕಾ ಮಾಹಿತಿ ಬ್ಯೂರೋ (PIB) ಕೂಡ ಈ ಹೇಳಿಕೆಯನ್ನು ಸುಳ್ಳು ಎಂದು ಸ್ಪಷ್ಟಪಡಿಸುತ್ತಾ ಈ ಮುಂದಿನ ಹೇಳಿಕೆಯನ್ನು ನೀಡಿದೆ: “ಡಿಜಿಟಲ್ ಮಾರ್ಪಾಟು ಮಾಡಲಾದ ಒಂದು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, DRDO ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ಕೆಲವು ಹೇಳಿಕೆಗಳನ್ನು ನೀಡಿದ್ದಾರೆಂದು ತಪ್ಪಾಗಿ ಆರೋಪಿಸುತ್ತಿದೆ.” ಪೋಸ್ಟ್ ಮುಂದೆ, “ವಿಡಿಯೋದ ಆಡಿಯೋ AI- ರಚಿತವಾಗಿದೆ” ಮತ್ತು “DRDO ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ” ಎಂದು ಉಲ್ಲೇಖಿಸುತ್ತದೆ.

DRDO ಹೇಳಿಕೆಗಳು, ರಕ್ಷಣಾ ಸಚಿವಾಲಯದ ಮಾಹಿತಿ ಬಿಡುಗಡೆಗಳು ಮತ್ತು ಇತ್ತೀಚಿನ ಅಗ್ನಿ-6 ವರದಿಗಳಿಗಾಗಿ ನಾವು ಹುಡುಕಾಟ ನಡೆಸಿದಾಗ ಕ್ಷಿಪಣಿ ಉತ್ಪಾದನೆ ಅಥವಾ ನಿರ್ವಹಣೆಯಲ್ಲಿ ಗೋ ಉತ್ಪನ್ನಗಳ ಕುರಿತಾದ ಉಲ್ಲೇಖ ನಮಗೆ ದೊರೆತಿಲ್ಲ.

ಆದ್ದರಿಂದ, ಈ ಹೇಳಿಕೆ ಸುಳ್ಳು


ಇದನ್ನೂ ಓದಿ:

SRH ಆಟಗಾರರು ಯೇಸುಕ್ರಿಸ್ತನಿಗೆ ಪ್ರಾರ್ಥಿಸುತ್ತಿರುವುದನ್ನು ಈ ಚಿತ್ರವು ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಪಾಕಿಸ್ತಾನ ಧ್ವಜ ಹೊತ್ತ ಹಡಗನ್ನು ಇರಾನ್ ಹರ್ಮಜ್ ಜಲಸಂಧಿಯಲ್ಲಿ ನಾಶಪಡಿಸಲಾಯಿತೇ? ಸತ್ಯ ಪರಿಶೀಲನೆ

Leave a Reply

Your email address will not be published.